ಅಧ್ಯಕ್ಷರ ಸಂದೇಶ
ನಮಸ್ಕಾರ,
ನಾನು ನಿಮ್ಮ ಪ್ರೀತಿಯ ಮುಖ್ಯಮಂತ್ರಿ ಚಂದ್ರು.
ಅವರೆಲ್ಲಾ ಅಧಿಕಾರದ ಮುಖ್ಯಮಂತ್ರಿಗಳು, ಈ ನಿಮ್ಮ ಚಂದ್ರು ಅಭಿಮಾನದ ಮುಖ್ಯಮಂತ್ರಿ.
ಅವರು ಮುಖ್ಯಮಂತ್ರಿ ಆದರೆ ಅವರಿಗೆ ಗರಿ, ಇನ್ಯಾರಿಗೋ ಉರಿ. ಆದರೆ ಮುಖ್ಯಮಂತ್ರಿ ಅನ್ನೋದು ನನಗೆ ಕನ್ನಡಿಗರು ಕೊಟ್ಟ ಸಿರಿ.
ನಾನೊಬ್ಬ ಕಲಾವಿದ. ಕನ್ನಡ, ನಾಟಕ, ಸಿನಿಮಾ ನನಗೆ ಜೀವ ಮತ್ತು ಜೀವನ. ಅಲ್ಲಿಂದ ನಾನು ರಾಜಕೀಯಕ್ಕೆ ಬಂದದ್ದು ಕೇವಲ ಆಕಸ್ಮಿಕ.
ಬಂದಾಗ ಏನೇನೋ ಆಸೆಗಳಿದ್ದವು, ಆದರ್ಶಗಳಿದ್ದವು. ಹತ್ತಿರಕ್ಕೆ ಹೋದಷ್ಟೂ ಕೊಳೆ, ಕೊಳಕು ಕಂಡಿತು. ನಿರಾಶೆ ಆಯಿತು. ಕನ್ನಡಿಗರ
ಪ್ರೀತಿಯ ಋಣ ತೀರಿಸುವುದು ಹೇಗೆ? ಆಮ್ ಆದ್ಮಿ ಕಂಡಿತು. ಸೇರಿಕೊಂಡೆ. ಡೆಲ್ಲಿಯಲ್ಲಿ ಆಮ್ ಆದ್ಮಿ ಮಾಡಿದ್ದನ್ನೆ ಕಾಪಿ ಚಿಟ್
ಮಾಡಿ ಕಾಂಗ್ರೆಸ್ ಇಲ್ಲಿ ಅಧಿಕಾರ ಹಿಡಿದಿದೆ.
ಎಪ್ಪತ್ತು ದಾಟಿದ್ದೇನೆ. ಅಧಿಕಾರದ ಆಸೆಯಿಲ್ಲ. ಡೆಲ್ಲಿಯಲ್ಲಿ ಬೀದಿಮಕ್ಕಳು ಸರ್ಕಾರಿ ಉಚಿತ ಶಾಲೆಗಳಲ್ಲಿ ಓದಿ ಡಾಕ್ಟರು,
ಇಂಜಿನಿಯರ್, ಐಎಎಸ್, ಐಪಿಎಸ್ ಆಗುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಗಳು ಸ್ಟಾರ್ ಹೋಟೆಲ್ ಗಳಂತಿದ್ದಾವೆ.
ಅಲ್ಲಿ ಸಾಧ್ಯವಾದರೆ ಇಲ್ಲೇಕೆ ಸಾಧ್ಯವಿಲ್ಲ? ನನ್ನೊಬ್ಬನಿಂದ ಅದು ಸಾಧ್ಯವಿಲ್ಲ. ನೀವು ಕೈಜೋಡಿಸಿದರೆ ಬೆಟ್ಟವನ್ನೂ
ಬಗ್ಗಿಸಬಹುದು. ಇನ್ನು ಈ ಮೂರು ಪಕ್ಷಗಳು ಯಾವ ಲೆಕ್ಕ?
ಹನಿ ಹನಿಯಾಗಿ ಬನ್ನಿ, ಹಳ್ಳವಾಗಿ ಸೇರಿಕೊಳ್ಳೋಣ, ಹೊಳೆಯಾಗಿ ಹರಿದುಬಿಡೋಣ.
ದಯವಿಟ್ಟು ಒಂದು ಮೆಸೇಜ್ ಕಳುಹಿಸಿ ಅಥವಾ ಕರೆ ಮಾಡಿ.